
MLA Salary Hike
ಇಡೀ ದೇಶಾದ್ಯಂತ ಬೆಲೆ ಏರಿಕೆ ಆಗುತ್ತಿದೆ, ತರಕಾರಿ, ಅಡುಗೆ ಎಣ್ಣೆ, ಅಡುಗೆ ಅನಿಲ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ ಎಂದು ಎಲ್ಲರ ಗಮನಾರ್ಹವಾಗಿದೆ.
ಮತ್ತೊಂದು ಕಡೆ ಪೆಟ್ರೋಲ್, ಡೀಸೆಲ್, ಚಿನ್ನ, ಬೆಳ್ಳಿಯ ದರ ಕೂಡ ಏರುತ್ತಿದೆ. ಬೆಲೆ ಏರಿಕೆಯಿಂದ ಜನಸಾಮಾನ್ಯರು ತುಂಬಾ ಸಂಕಷ್ಟ ಪಡುತ್ತಿದ್ದಾರೆ. ಇಷ್ಟೆಲ್ಲಾ ಬೆಲೆ ಏರಿಕೆ ಆದ್ರೂ ನಮ್ಮ ಸಂಬಳದಲ್ಲಿ ಮಾತ್ರ ಏರಿಕೆಯಾಗುತ್ತಿಲ್ಲ ಅಂತ ಜನರು ಚಿಂತಿತರಾಗಿದ್ದಾರೆ.
ಈ ನಡುವೆಯೇ ನಮ್ಮನ್ನು ಆಳುವ ಜನ ಪ್ರತಿನಿಧಿಗಳ ಸ್ಯಾಲರಿ ಮಾತ್ರ ಯಾವುದೇ ಸಮಸ್ಯೆವಿಲ್ಲದೆ ಏರಿಕೆಯಾಗಿದೆ.
ಹೌದು, ವಿಧಾನಸಭೆಯ ಸದಸ್ಯರು ಅಂದರೆ ನಮ್ಮ ಶಾಸಕರ (MLA) ಮಾಸಿಕ ವೇತನ ಪರಿಷ್ಕರಣೆ ಮಾಡಿದ್ದಾರೆ. ಸದ್ಯ ಇದೀಗ ಶಾಸಕರು 2.05 ಲಕ್ಷ ರೂಪಾಯಿ ಮಾಸಿಕ ಸಂಬಳವನ್ನು ಪಡೆಯಲಿದ್ದಾರೆ.
ರಾಜ್ಯ ವಿಧಾನಮಂಡಲ ಸದಸ್ಯರ ವೇತನ ಪರಿಷ್ಕರಣೆಯಾಗಿದ್ದು, ಇದರ ಅನ್ವಯ ರಾಜ್ಯದ ಶಾಸಕರು ಮಾಸಿಕ 2.05 ಲಕ್ಷ ರೂ. ಪಡೆಯಲಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಬಜೆಟ್ ಅಧಿವೇಶನಕ್ಕೂ ಮುನ್ನ ಕರ್ನಾಟಕ ವಿಧಾನಸಭೆ ವೇತನ, ಪಿಂಚಣಿ, ಭತ್ಯೆ (ತಿದ್ದುಪಡಿ) ಕಾಯ್ದೆಯನ್ನು ಉಭಯ ಸದನಗಳಲ್ಲಿ ಅಂಗೀಕಾರ ಮಾಡಲಾಗಿತ್ತು.
ವಿಧಾನಸಭೆ ಅಧಿವೇಶನದಲ್ಲಿ ಅಂಗೀಕಾರ!
ಈ ಹಿಂದೆ ವಿಧಾನಸಭಾ ಅಧಿವೇಶನದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಧರಣಿ, ಕೂಗಾಟ ಹಾಗು ಗದ್ದಲ ನಡೆಸುತ್ತಿದ್ದರು.
ಈ ಸಂದರ್ಭದಲ್ಲಿ, ‘ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2022’ ಮತ್ತು ‘ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2022’ ಅನ್ನು ಕಾನೂನು & ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಮಂಡಿಸಿ, ಅಂಗೀಕಾರ ಪಡೆದಿದ್ದಾರೆ.
ಶಾಸಕರ ಸಂಬಳದ ಹಂಚಿಕೆ ಹೇಗೆ?
ಶಾಸಕರ ಮೂಲ ವೇತನ 40,000 ರೂ. ಗಳಿದ್ದು, ಕ್ಷೇತ್ರ ಭತ್ಯೆ 60,000 ರೂ, ಕ್ಷೇತ್ರ ಪ್ರವಾಸ ಭತ್ಯೆ 60,000 ರೂ, ಸಿಬ್ಬಂದಿ ಹಾಗು ಸಹಾಯಕರ ವೇತನ ಭತ್ಯೆ 20,000 ರೂ. ಪೋಸ್ಟಲ್ ಭತ್ಯೆ 5,000 ರೂ., ಫೋನ್ ಭತ್ಯೆ 20,000 ರೂ. ಎಂದು ನಿಗದಿ ಪಡಿಸಲಾಗಿದೆ.
ಸಂಬಳ ಎಷ್ಟು ಹೆಚ್ಚಾಗಿದೆ?
ಹೊಸ ಸಂಬಳದನ್ವಯ ಶಾಸಕರು ಹಾಗು ವಿಧಾನಪರಿಷತ್ ಸದಸ್ಯರ ವೇತನದಲ್ಲಿ ಶೇ 60, ಮುಖ್ಯಮಂತ್ರಿ & ಸಚಿವರ ವೇತನದಲ್ಲಿ ಶೇ 50, ಸಭಾಧ್ಯಕ್ಷರು, ಸಭಾಪತಿ ಮತ್ತು ವಿರೋಧ ಪಕ್ಷಗಳ ನಾಯಕರ ಸಂಬಳದಲ್ಲಿ ಶೇ 50ರಷ್ಟು ಹೆಚ್ಚಾಗಿದೆ.
ಆದರೆ, ಸಂಬಳಕ್ಕಿಂತ ವಿವಿಧ ರೀತಿಯ ಭತ್ಯೆಗಳನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದ್ದು, ವೇತನಕ್ಕಿಂತ ಭತ್ಯೆಗಳ ಗಳಿಕೆಯೇ ಹೆಚ್ಚಾಗಿದೆ.
ಏಪ್ರಿಲ್ 1ರಿಂದಲೇ ನೂತನ ಸಂಬಳ ಜಾರಿ!
ಈ ತಿದ್ದುಪಡಿ ಕಾಯ್ದೆ ಅಂಗೀಕಾರಗೊಳ್ಳುವ ಮೂಲಕ ಶಾಸಕರ ವೇತನ, ಭತ್ಯೆಗಳಲ್ಲಿ ಶೇ.50ರಷ್ಟು ಏರಿಕೆ ಮಾಡಲು ಉಭಯ ಸದನಗಳಲ್ಲಿ ಅನುಮೋದನೆ ದೊರೆತಿದೆ.
ಅಷ್ಟೇ ಅಲ್ಲದೇ, 5 ವರ್ಷಗಳಲ್ಲಿ ಒಮ್ಮೆ ಸ್ವಯಂ ಚಾಲಿತವಾಗಿ ಏರಿಕೆಗೂ ಈ ತಿದ್ದುಪಡಿ ಕಾಯ್ದೆಯ ಮೂಲಕ ಅನುಮೋದನೆಯನ್ನು ನೀಡಲಾಗಿತ್ತು.
ಸರ್ಕಾರದ ಖಜಾನೆಗೆ ಹೊರೆ!
ಈ ಎರಡೂ ಮಸೂದೆಗಳು ರಾಜ್ಯಪಾಲರ ಅಂಕಿತ ಪಡೆದು ಕಾಯ್ದೆಯಾದ ಬಳಿಕ, ವೇತನ ಹೆಚ್ಚಾಗಿದ್ದು, 2022 ರ ಏ.1 ರಿಂದ ಪರಿಷ್ಕೃತ ವೇತನವು ಜಾರಿಗೆ ಬಂದಿದೆ.
ಇದರಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 92.40 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ ವರದಿ ಮಾಡಲಾಗಿದೆ.